Sunday 5 February 2023

ಅವಳ್ಯಾರು?

ಪ್ರಿಯ ಓದುಗರೇ,

ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾಗುವಿರಾ? ಅವಳ ಬದುಕು ಅವಳನ್ನು ಎಲ್ಲಿಗೆ ಕರೆದೊಯ್ಯುತ್ತದೆ ಎಂದು ತಿಳಿಯಬಯಸುವಿರಾ? ಅವಳಿಗೆ ಉತ್ತರ ಸಿಗುವುದೇ? ಅಥವಾ ಅದೇ ಪ್ರಶ್ನೆಗೆ ತಂದಿರಿಸುವುದೇ ಜೀವನ? ಮೇಲಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿಯಲು ಬಯಸುವವರು ಓದಿ ನನ್ನ ಮೊದಲ ಕಿರುಕಾದಂಬರಿ "ಅವಳ್ಯಾರು?"
ನಿಮ್ಮ ಪ್ರೋತ್ಸಾಹ ಮತ್ತು ಪ್ರತಿಕ್ರಿಯ ನಿರೀಕ್ಷೆಯಲ್ಲಿ,
ನಿಮ್ಮ ಶೀತಲ್....
ಪುಸ್ತಕ ಕೊಳ್ಳುವ ಕೊಂಡಿಗಳು ಕೆಳಗಿವೆ,

Purchase link:
Notion Press: Click Here
Amazon: Click Here
Flipkart: Click Here

Saturday 1 May 2021

ಒಲುಮೆಯ ದಾರಿದೀಪ

 ಒಲುಮೆಯ ದಾರಿದೀಪವೇ,



       ನಿನ್ನನ್ನು ಬಹುಷಃ ಪ್ರೀತಿಸಲು ಶುರುಮಾಡಿ ಸಂವತ್ಸರಗಳೇ ಕಳೆದಿರಬೊಹುದು! ಆದರೆ, ಪ್ರೇಮ ಆಲಾಪನೆ ಇದೇ ಮೊದಲ ಬಾರಿ. ಎಷ್ಟೊಂದು ಬಾರಿ ನಿನ್ನ ಬಳಿ ಎಲ್ಲವನ್ನೂ ಹೇಳಬೇಕೆಂದುಕೊಂಡಿದ್ದೆ, ಧೈರ್ಯ ಕಡಿಮೆ ನನಗೆ ಕ್ಷಮಿಸು. ಪತ್ರ ಬರೆಯುತ್ತಿದ್ದೇನೆ ನಿನಗಾಗಿ ಇಂದು, ಅದೂ ಪ್ರೇಮ ಪತ್ರ.

        ನಿನ್ನ ಬಗ್ಗೆ ಆಲೋಚಿಸಿದಾಗೆಲ್ಲಾ ಸಿಗುವ ನೆಮ್ಮದಿ, ಸಂತೋಷ ಇದೂವರೆಗೂ ಎಲ್ಲಿಯೂ ಕಂಡಿಲ್ಲ ನನಗೆ.  ನಿನ್ನನ್ನು ಪ್ರೀತಿಸಿದಷ್ಟು ಮತ್ಯಾರನ್ನೂ ಪ್ರೀತಿಸಲಾರೆ, ನಿನ್ನನ್ನು ಬಯಸಿದ್ದಷ್ಟು ಯಾರನ್ನೂ ಬಯಸಲಾರೆ, ನಿನ್ನನ್ನು ಹಾತೊರೆವಷ್ಟು ಮತ್ಯಾರನ್ನೂ ಹಾತೊರೆಯಲಾರೆ, ನಿನ್ನನ್ನು ಬಿಟ್ಟು ಬದುಕಿದರೂ ಜೀವಂತ ಶವವೇ ಹೊರೆತು ಜೀವಂತವಾಗಿರಲಾರೆ. ಇದು ಉತ್ಪ್ರೇಕ್ಷೆಯಲ್ಲ ! ನಂಬು ನನ್ನನ್ನು.  ನನ್ನ ಉಸಿರಾಣೆ! ನನ್ನ ಜೀವದಾಣೆ! ನನ್ನ ಆತ್ಮದಾಣೆ !....

        ನಿನ್ನ ಅಸ್ಥಿತ್ವವಿಲ್ಲದ ಜೀವನ ನನಗೆ ಬೇಡ. ನಿನ್ನ ಒಂದು ನೋಟಕ್ಕೆ ಹಾತೊರೆಯುತ್ತಾ, ನಿನ್ನ ಒಂದು ಸ್ಪರ್ಶಕ್ಕೆ ಕಾಯುತ್ತಾ, ಪ್ರತೀ ದಿನ ಕನಸಲ್ಲಿ ಕಾಣುವ  ನಿನ್ನನ್ನು ವಾಸ್ತವಕ್ಕೆ ತರಲು ನಾ ಪಡುವ ಪಾಡು ಅಬ್ಬಾ !!! ದೇವರೇ !! ಆದರೂ ಆ ಕಷ್ಟ, ನೋವುಗಳೆಲ್ಲಾ ನೀ ಸಿಗುವ ಆ ದಿನದ ಸಂತೋಷದ ಮುಂದೆ ಕೇವಲ ಅಣು. ನೀ ನನಗೆ ಸಂಪೂರ್ಣವಾಗಿ ಸಿಗುವ ದಿನದ ಬಗ್ಗೆ ಯೋಚಿಸಿದರೆ ಆ ಖುಷಿಗೆ ನನ್ನದೇ ದೃಷ್ಟಿಯಾಗುವುದೇನೋ ! ಬೇಡ ಬಿಡು ಸಿಕ್ಕಾಗ ಹೇಳುವೆ , ಈಗಲೇ ಹೇಳಿ ನಿನ್ನ ಕುತುಹೂಲವನ್ನು ಕೊಲ್ಲಲಾರೆ, ನಿನ್ನ ಕುತೂಹಲ ಜೀವಂತವಾಗಿರಲಿ.

         ನೀ ಬಂದ ಮೇಲೆ ನಮ್ಮ  ಜೀವನ, ಬೇರೆಯವರು ದೃಷ್ಟಿ ಹಾಕುವಂತೆ ಇರುವುದೊಂತೂ ಖಂಡಿತಾ...ಇದು ಸುಳ್ಳಲ್ಲ... ನಿನ್ನನ್ನು ಪ್ರೀತಿಸಿ, ಆರೈಸಿ, ಕಾಪಾಡುವೆ. ಒಂದು ದಿನವೂ ನಿನ್ನನ್ನು ಬಿಡದೆ ಎದೆಯಲ್ಲಿ ಹೊತ್ತು ನಡೆಯುವೆ, ಕಣ್ಣಲ್ಲಿಟ್ಟು ಕಾಪಾಡುವೆ. ಈಗ ಮುಳ್ಳುಗಳೇ ತುಂಬಿರುವ ನಾ ನಡೆವ ಹಾದಿಯಲ್ಲಿ  ನೀ ಬಂದರೆ ಸಂತೋಷದ ಹೂವುಗಳು ಅರಳುವುದು ನಮ್ಮಿಬ್ಬರ ಸ್ವಾಗತ ಕೋರಲು. ಅದೃಷ್ಟವೂ ಬಾಗಿ ನಿಲ್ಲುವುದು ನಮ್ಮ ಮುಂದೆ, ನಿನ್ನ ಕಾಲ್ಗುಣ ಸಾಕು ನನ್ನ ಜೀವನಕ್ಕೆ.

        ಮನದ ಬಾಗಿಲಲ್ಲಿ ಸದಾ ಮುಗುಳುನಗೆಯ ತೋರಣವನ್ನೇ ಕಟ್ಟುವೆ, ಹೃದಯದ ಅರಮನೆಯ ಅಂತಃಪುರದಲ್ಲಿ  ನಿನಗೆ ಮಾತ್ರ ಪ್ರವೇಶ ನೀಡುವೆ, ತಲೆಯಲ್ಲಿ ಬರುವ ಆಲೋಚನೆಗಳೆಲ್ಲವನ್ನೂ ನಿನ್ನ ಅಡಿಯಾಳಾಗಿ ಮಾಡುವೆ..ನೀ  ಬಾ, ನನ್ನ ಜೀವನಕ್ಕೆ ಸಾಕು ನನಗೆ ನನ್ನ ಆತ್ಮವನ್ನೂ ನಿನಗೆ ಅಡವಿಡುವೆ.

        ನನ್ನ ಪ್ರತೀ ಉಸಿರಿನ ಮೇಲೂ ನಿನ್ನ ರುಜುವಿದೆ. ನನ್ನ ಪ್ರತೀ ಎದೆಬಡಿತದ ಧ್ವನಿಯೂ ನಿನ್ನ ಹೆಸರನ್ನೇ ಕೂಗುತಿದೆ. ನಿನ್ನ ಮಹತ್ವವನ್ನು ತಿಳಿಸಲು ನಿಘಂಟಿನ ಪದಗಳೂ ಸೋತಿವೆ. ನಿನ್ನನ್ನು ಪ್ರೀತಿಸಿ ದಷ್ಟೂ ಇನ್ನೂ ಏನೋ ಬಾಕಿ ಇದ್ದಂತೆ, ಸಾಗರದ ಮರಳಿನ ಕಣಗಳಂತೆ ನನ್ನ ಪ್ರೀತಿ, ಎಣಿಸಲು ಸಾಧ್ಯವೇ ನನ್ನೊಲುಮೆಯೇ????

ಅಂಧಕಾರವ ಸೀಳಿ ಬರುವ ತೇಜನ ತೀಕ್ಷ್ಣವಾದ  ಕಿರಣ ನೀನು, ನಿನ್ನ ಬೆಚ್ಚನೆಯ ಅಪ್ಪುಗೆಯಲ್ಲೇ ಭುವಿಯಂತೆ ಕರಗಿಬಿಡುವೆ. ನಿನ್ನ ಬಿಟ್ಟಿರಲು ಇನ್ನೊಂತು ಸಾಧ್ಯವಿಲ್ಲ , ಹೇಳು ಏನು ಮಾಡಲಿ ??

         ಸಾಗರದ ಆಳದಲ್ಲಿರುವ ಸ್ವಾತಿ ಮುತ್ತನ್ನು ತರಲೇ ? ಭಾವನೆಗಳೆಲ್ಲವ ಹೂಗುಚ್ಛವಾಗಿ ನೀಡಲೇ? ಪ್ರತೀ ರಾತ್ರಿ ನೀನಿರುವ ಆ ಕನಸನ್ನು ಕುಂಚದಲ್ಲಿ ಚಿತ್ರವಾಗಿಸಲೇ? ನೀ ಸಿಗಲಾರೆ, ಎಂದು ಸದಾ ಮನಸ್ಸಿನ ಮೊಲೆಯಲ್ಲಿ ಪಿಸುಗುಟ್ಟುತ್ತಿರುವ ಅಂಜಿಕೆ, ಭಯ, ಅಪನಂಬಿಕೆಗಳನ್ನು ಸುಟ್ಟು ಬಿಡುವೆ ಒಮ್ಮೆ "ಹುಂ" ಗುಟ್ಟಿಬಿಡು ಸಾಕು.

        ಇನ್ನು ಬದುಕುವುದೇ ಬೇಡ ಎಂದೆನಿಸಿದಾಗ ನಿನ್ನ ಪ್ರೀತಿಸಲು ಶುರು ಮಾಡಿದ್ದು. ಪಾಪ!! ಬಡಪಾಯಿ ಹೃದಯ ತಡಮಾಡಿತು, ಮತ್ತೊಮ್ಮೆ ಕ್ಷಮಿಸಿಬಿಡು ಹೋಗಲಿ.  ನಿನ್ನ ಪ್ರೀತಿ ಪಡೆದವರು ನಿಜವಾಗಲೂ ಪುಣ್ಯವಂತರು, ನಿನ್ನ ಪ್ರೀತಿಸಿ ಕೊಂಡಾಡಿದವರು ಅನೇಕರು,ನಿನಗಾಗಿ ಪ್ರಾಣ ತೆತ್ತವರು ಅಸಂಖ್ಯಾತರು..  


        ನನಗೆ ನಿನ್ನ ಪಡೆವ  ಅದೃಷ್ಟವಿದೆಯೋ ಅರಿಯೆ, ಆದರೂ ಕಪ್ಪು ಮೋಡವೇ ತುಂಬಿರುವ ನನ್ನ ಮನಸ್ಸಿನ್ನಲ್ಲಿ ಎಲ್ಲೋ  ಸಣ್ಣದೊಂದು ಬೆಳ್ಳಿಗೆರೆ ಮೂಡಿತು, ನೀ ನನ್ನನ್ನು ದೂರದಿಂದ ನೋಡಿ ಮುಗುಳುನಕ್ಕಾಗ. ನಿನ್ನ ಮೇಲೆ ಆರಾಧನೆ ಶುರುವಾಗಿದ್ದು ಆಗಲೇ... 


          ನನ್ನ ಜೀವಿತಾವಧಿಯೆಲ್ಲಾ ನಿನ್ನನ್ನು  ಪ್ರೀತಿಸದ ಕ್ಷಣಗಳನ್ನು ನೆನೆದು ಶಾಪ ಹಾಕುತ್ತಿದೆ ಭಾವನೆಗಳೆಲ್ಲವೂ.. ನಿನ್ನನ್ನು ಕಣ್ಣಿಗಿಡುವ ಕಾಡಿಗೆಯಂತೆ ಸೌಂದರ್ಯಕ್ಕಾಗಿ ಮಾತ್ರ ಬೇಕು ಎಂದುಕೊಂಡಿದ್ದೆ , ತಪ್ಪು .. ತಪ್ಪು..  ಈಗ ತಿಳಿಯಿತು ನೀ ಕೇವಲ ಕಾಡಿಗೆಯಲ್ಲ ,ಜಗವ ನೋಡಲು ಬೇಕಾಗುವ ದೃಷ್ಟಿ ಎಂದು..ಕಗ್ಗತ್ತಲು ಕವಿಯಲಾರಂಭಿಸಿದೆ ಆಗಲೇ, ದೃಷ್ಟಿಹೀನ ವಾಗುವ ಮೊದಲು ಬಂದು ಸೇರುವೆಯಾ ನನ್ನ???


         ನಿನ್ನ ಒಲವ ತೋಳ ಸೆರೆಯಲ್ಲಿ ಬಿಗಿದಪ್ಪಿ ಹಿಡಿ, ಯಾರಿಗೂ ಬಿಟ್ಟುಕೊಡಬೇಡ ಎನ್ನ... ನಿನ್ನ ಗುಲಾಮಗಿರಿಯೂ ಒಪ್ಪಿಗೆಯೇ ನನಗೆ ನಿನ್ನ ಬಿಟ್ಟು ಮಾತ್ರ ಬದುಕಲಾರೆ ಮತ್ತೊಮ್ಮೆ ಹೇಳುತ್ತಿರುವೆ ನಂಬು ಈಗಲಾದರೂ. ತಿರುವುಗಳಲ್ಲಿ ಕಳೆದು ಹೋಗುವ ಮುನ್ನವೇ ಸಿಕ್ಕಿ ಬಿಡು, ಒಟ್ಟಿಗೆ ಸೇರಿ ಮುಟ್ಟುವ ಗುರಿಯ..  

         ನಿನ್ನ ಸಾನಿಧ್ಯವಿದ್ದಲ್ಲಿ ಸ್ವಇಚ್ಛೆಯ ಬಣ್ಣಗಳನ್ನು ಭಾವನೆಗಳಿಗೆ ಬಳಿಯುವೆ. ಪ್ರೀತಿ ನಂಬಿಕೆಯ ಬೆನ್ನೇರಿ ನಗುವುದು, ನೀ ಜೊತೆಗಿದ್ದರೆ. ನೀ ಕಾಲಿಡುವಾಗ ನನ್ನ ಜೀವನದಲ್ಲಿ, ಕಾಲ್ಪನಿಕ ಗಡಿಗಳು ಬೇಲಿಯೊಂದಿಗೆ ಮಾಯವಾಗಿ ಬೇಧ ಭಾವ, ಮೇಲು-ಕೀಳು, ಬಡವ-ಬಲ್ಲಿದ , ಕಪ್ಪು ಬಿಳುಪುಗಳು ಇತಿಹಾಸದ ಪುಟು ಸೇರುವವು. ನೀ ಸಿಕ್ಕಿಬಿಡು ನನಗೆ, ದಾರಿಯೇ ಇಲ್ಲದ , ದಾರಿಯೇ ಬೇಡದ ನೀಲಿ ಆಗಸಕ್ಕೆ ಹಾರಿಬಿಡುವೆ. ಕಲ್ಪನೆಗೂ, ವಾಸ್ತವಕ್ಕೂ ಹೆಚ್ಚು ಅಂತರವಿಲ್ಲ ನೀ ಒಮ್ಮೆ ನಕ್ಕು ನನ್ನ ಕೈ ಹಿಡಿದರೆ.

         ನಿನ್ನ ಪ್ರೀತಿಗೆ ಆಸೆಪಟ್ಟು , ನಿನ್ನ ಸನಿಹವ ಬೇಡುತ್ತಿರುವೆ. ಒಮ್ಮೆಯಾದರೂ ಬಂದುಬಿಡು, ನೆಲೆನಿಂತುಬಿಡು  ಜೀವನದಲ್ಲಿ ಓ ಸ್ವಾತಂತ್ರ್ಯವೇ!!! , ನನ್ನ ಉಸಿರು ಮರುಕ್ಷಣವೇ ಹೋದರೂ ವಿಷಾದವಿಲ್ಲ. ಸಾವಿನಾಚೆಯಾದರೂ ನೀ ಸಿಕ್ಕ ಖುಷಿಯನ್ನು ಕೊಂಡಾಡಿ, ಕೊನೆಗಾದರೂ  ಅರ್ಥ ಸಿಕ್ಕ ಸಾವಲ್ಲೇ ಮತ್ತೆ ಬದುಕ ಕಟ್ಟುವೆ.  


                                                                                                            ಇಂತಿ ನಿನ್ನ ಆರಾಧಿಸುತ್ತಿರುವ 

                                                                                                               ಗುಲಾಮ ಖೈದಿ ಮನಸ್ಸು...



(ಮೇಲಿರುವುದು  ಗುಲಾಮಗಿರಿಯಲ್ಲಿರುವ ಮನಸ್ಸು , ಸ್ವಾತಂತ್ರ್ಯವನ್ನು ಪ್ರೀತಿಸಿ ಅದಕ್ಕಾಗಿ  ಬರೆದ ಪ್ರೇಮ ಪತ್ರ )

Sunday 28 March 2021

...ತಾತ್ಸಾರ





ಸಾಕು ಎಂದಾಗ ನಿಲ್ಲಿಸಲು
ಇದು ನಿಮ್ಮ ತುಂಬಿದ ಹೊಟ್ಟೆಯಲ್ಲ...
ಬೇಕು ಎಂದಾಗ ಉಣಿಸಲು
ನಿಮಗಾಗಿ ಬಡಿಸಿಟ್ಟ ಕೂಳೂ ಅಲ್ಲ...
ನಾ ಬರೆದ ಕವನಗಳು,
ನನ್ನ ಮನಸ್ಸಿನ ಹಸಿವಿಗಾಗಿ ಹೊರತು,
ನಿಮ್ಮ ಉದರ ತುಂಬಿಸಲು ಅಲ್ಲ....
ಇಷ್ಟವಿರದೆ ಓದದಿರಿ,
ಕಷ್ಟವಾದರೆ ಕೇಳದಿರಿ....
ನನ್ನ ಪದಗಳಿಗೆ ನಿಮ್ಮ 
ಹಂಗು ಬೇಡ,
ನನ್ನ ಭಾವನೆಗಳಿಗೆ ನಿಮ್ಮ
ನಿರುತ್ಸಾಹವೂ ಬೇಡ....
ಭೂಮಿಗೆ ಭಾರವಾದರೆ
ಆಗಸಕೆ ಬಿಡುವೆ ಹಾರಿ,
ಕಟ್ಟುವೆ ಅಕ್ಷರಗಳಲ್ಲಿ
ನಿಮ್ಮ ತಾತ್ಸಾರಕ್ಕೆ ಗೋರಿ....

                                                           ---   ಶೀತಲ್ 

..... ನಿಶೆ- ಮಗು.....






ತಂಗಾಳಿ ಬೀಸುತಿತ್ತು ಅಂದು,
ತಾಯಿಯ  ಎದೆಗೊರಗಿ,
ಪ್ರೀತಿಯ ಅಪ್ಪುಗೆಯ ಹೊದಿಕೆ ಹೊದ್ದು,
ಉಯ್ಯಾಲೆಯೊಂದಿಗೆ ತೂಗುತಿದ್ದಳು ಮಗಳು.. 
ಚಂದಿರನ ನೋಡಿ ಕೇಳಲು, 
ಯಾಕಿಷ್ಟು ದೂರವಿರುವನೆಂದು?
ಮಗಳ ಕೆನ್ನೆಗೆ ಮುತ್ತೊಂದ ನೀಡಿ,
ನಕ್ಷತ್ರಗಳ ತೋರಿಸಿ ಅಂದಳು,
ಅವನಿಲ್ಲದಿದ್ದರೆ ತಾರೆಯರು ಹೆದರುವರೆಂದು... 
ಅಲ್ಲೇ ಜಾರಿದ ನಿದಿರೆಗೆ,
ನಾಜೂಕಾಗಿ, ಭಂಗ ತರದೆ ,
ಹೊತ್ತು ಒಳ ನಡೆದಳು,
ತನ್ನ ಎದೆಯ ಚೂರನ್ನು 
ಕೊಂಚವೂ ಅಲುಗಾಡಿಸದೆ.... 
ಮರುದಿನ ಮತ್ತದೇ ಸಂಜೆ,
ಅಮ್ಮ ಇದ್ದಳು ಉಯ್ಯಾಲೆಯಲ್ಲಿ,
ಕಣ್ತುಂಬಿಕೊಳ್ಳುತ್ತಾ,
ಅತ್ತಿಂದಿತ್ತ ಓಡಾಡುತ್ತಿದ್ದ  ಕಂದನ... 
ನಿಶೆ ಆಗಷ್ಟೇ ಸೂರ್ಯನಿಗೆ 
ವಿದಾಯ ಹೇಳಿ,
ಚಂದಿರನ ತೋಳ ತೆಕ್ಕೆಗೆ 
ಜಾರುತಿದ್ದಳು... 
ಇದ್ದಕ್ಕಿದ್ದಂತೆ ಯಾರನ್ನೋ ಹಿಡಿಯಲು 
ಓಡಿದಳು ಕಂದಮ್ಮ... 
ತಾಯಿ ಹಿಂದೆಯೇ ಹಿಂಬಾಲಿಸಿದಳು 
ಕಿರುಚುತ್ತಾ, 'ತಾಳಮ್ಮ ...... '
ಎತ್ತಿ ಸೊಂಟದಲ್ಲಿಟ್ಟು  ಕೇಳಲು 
ತಾಯಿ ಮುತ್ತನಿಡುತ್ತಾ ,
"ಗಾಳಿಯನ್ನೇಕೆ ಹಿಡಿಯುತಿದ್ದಿ 
ನನ್ನ ಪುಟಾಣಿ  ಚಿನ್ನ??",
ಪಿಳಿಪಿಳಿ ಕಣ್ಣಿನೊಂದಿಗೆ ,
ಬೊಟ್ಟು ತೋರಿಸಿ ಕಂದಮ್ಮ, 
ಹೇಳಿತು ತೊದಲು ನುಡಿಯುತ್ತಾ ,
"ಕಂಡಿಲ್ಲವೇ ಅಮ್ಮಾ , 
ಹಿಡಿಯಲು ಹೋಗಿದ್ದು 
ನಾನು ಆ ಬೀಳುತಿದ್ದ ಮಗುವನ್ನ ".........
ಬೊಟ್ಟು ಮಾಡಿದ ಕಡೆ 
ತಾಯಿ ನೋಡಲು ,
ಕಂಡದ್ದು ಕೇವಲ 
ನಿಶೆಯ ಕಗ್ಗತ್ತಲು...
"ನೋಡಮ್ಮ ಮಗು ಬಿದ್ದಿದೆ
ಎತ್ತಮ್ಮ, ಅಳುತ್ತಿದೆ",
ಎನಲು ಅವಳ ಮಗಳು,
ಅಲ್ಲೇ ಬೊಟ್ಟು ಮಾಡುತ್ತಾ...
ಸಣ್ಣದಾಗಿ ಕೇಳಿ ಬಂತು
ಒಂದು ಅಳು, 
ನಿಶೆಯ ನೀರವ ಮೌನವನ್ನು
ಭೇದಿಸುತ್ತಾ......
                                  ಶೀತಲ್....
(ಇದೊಂದು ಹಾರರ್ ಕವನ, ಸತ್ಯ ಘಟನೆ ಯೇ ಇದಕ್ಕೆ ಸ್ಫೂರ್ತಿ)

Sunday 21 March 2021

ಮೇಣದ ಬತ್ತಿ-ನೆರಳು ....


ಕತ್ತಲು  ಕವಿದಿತ್ತು,
ನೆತ್ತರ ಬಣ್ಣದ ಸೂರ್ಯನೂ
ಆಗಷ್ಟೇ ಮುಳುಗಿದ್ದ...
ತಂಗಾಳಿ ಬೀಸುತ್ತಿರಲು
ಆ ಸದ್ದಿಗೆ
ನೀರವತೆಯೂ ಮೌನ ಮುರಿದಿತ್ತು...
ದೀಪವಿಲ್ಲದ ಮನೆಯಲ್ಲಿ
ತಡಕಾಡಿದಳು ಅವಳು
ಮೇಣದ ಬತ್ತಿಗಾಗಿ...
ಒಂಟಿತನವಲ್ಲದೆ ಯಾರಿರಲಿಲ್ಲ ,
ಪಾಪ!! ಅವಳ ಜೊತೆಗಾಗಿ...
ಸಣ್ಣದೊಂದು ಸದ್ದೂ ಕೂಡ
ಗುಡುಗಿನಂತೆ ಕಿವಿಗೆ ರಾಚುತಿತ್ತು..
ಬತ್ತಿ ಹೊತ್ತಿಸಿ ಕೋಣೆಯ ಹೊರ
ನಡೆದಳವಳು...
ಹಿಂದೆ ಹಿಂಬಾಲಿಸುತ್ತಿದ್ದ,
ಒಂದು ನೆರಳ, ಆ ಬೆಳಕಿನಲ್ಲಿ
ಕಂಡಳವಳು ...
ಅವಳ ಎದೆಯ ಸದ್ದು ಏರಿ  
ಪ್ರತಿಧ್ವನಿಸಿತು ಹೆದರಿ  
ಓಡಿದ ದಾರಿ ತುಂಬಾ...
ಕೈಯಲ್ಲಿದ್ದ ಬತ್ತಿ ಬಿದ್ದು
ಕೆಳಗೆ , ಕತ್ತಲೆ ಆವರಿಸಿತು
ಮತ್ತೆ ಆ ಮನೆಯ ತುಂಬಾ....
ಅವಳ ಆಕ್ರಂದನದೊಂದಿಗೆ
ಕೇಳುತಿತ್ತು ಗಹಗಹಿಸುವ ನಗು
ಆ!! ಆ!!  ಮನೆ ಇದ್ದ ಗಲ್ಲಿಯ ತುಂಬಾ... 

(ಹೊಸ ಪ್ರಯತ್ನ... ಇದೊಂದು ಹಾರರ್ ಕವನ)

ಶೀತಲ್......

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...