Sunday 28 March 2021

...ತಾತ್ಸಾರ





ಸಾಕು ಎಂದಾಗ ನಿಲ್ಲಿಸಲು
ಇದು ನಿಮ್ಮ ತುಂಬಿದ ಹೊಟ್ಟೆಯಲ್ಲ...
ಬೇಕು ಎಂದಾಗ ಉಣಿಸಲು
ನಿಮಗಾಗಿ ಬಡಿಸಿಟ್ಟ ಕೂಳೂ ಅಲ್ಲ...
ನಾ ಬರೆದ ಕವನಗಳು,
ನನ್ನ ಮನಸ್ಸಿನ ಹಸಿವಿಗಾಗಿ ಹೊರತು,
ನಿಮ್ಮ ಉದರ ತುಂಬಿಸಲು ಅಲ್ಲ....
ಇಷ್ಟವಿರದೆ ಓದದಿರಿ,
ಕಷ್ಟವಾದರೆ ಕೇಳದಿರಿ....
ನನ್ನ ಪದಗಳಿಗೆ ನಿಮ್ಮ 
ಹಂಗು ಬೇಡ,
ನನ್ನ ಭಾವನೆಗಳಿಗೆ ನಿಮ್ಮ
ನಿರುತ್ಸಾಹವೂ ಬೇಡ....
ಭೂಮಿಗೆ ಭಾರವಾದರೆ
ಆಗಸಕೆ ಬಿಡುವೆ ಹಾರಿ,
ಕಟ್ಟುವೆ ಅಕ್ಷರಗಳಲ್ಲಿ
ನಿಮ್ಮ ತಾತ್ಸಾರಕ್ಕೆ ಗೋರಿ....

                                                           ---   ಶೀತಲ್ 

..... ನಿಶೆ- ಮಗು.....






ತಂಗಾಳಿ ಬೀಸುತಿತ್ತು ಅಂದು,
ತಾಯಿಯ  ಎದೆಗೊರಗಿ,
ಪ್ರೀತಿಯ ಅಪ್ಪುಗೆಯ ಹೊದಿಕೆ ಹೊದ್ದು,
ಉಯ್ಯಾಲೆಯೊಂದಿಗೆ ತೂಗುತಿದ್ದಳು ಮಗಳು.. 
ಚಂದಿರನ ನೋಡಿ ಕೇಳಲು, 
ಯಾಕಿಷ್ಟು ದೂರವಿರುವನೆಂದು?
ಮಗಳ ಕೆನ್ನೆಗೆ ಮುತ್ತೊಂದ ನೀಡಿ,
ನಕ್ಷತ್ರಗಳ ತೋರಿಸಿ ಅಂದಳು,
ಅವನಿಲ್ಲದಿದ್ದರೆ ತಾರೆಯರು ಹೆದರುವರೆಂದು... 
ಅಲ್ಲೇ ಜಾರಿದ ನಿದಿರೆಗೆ,
ನಾಜೂಕಾಗಿ, ಭಂಗ ತರದೆ ,
ಹೊತ್ತು ಒಳ ನಡೆದಳು,
ತನ್ನ ಎದೆಯ ಚೂರನ್ನು 
ಕೊಂಚವೂ ಅಲುಗಾಡಿಸದೆ.... 
ಮರುದಿನ ಮತ್ತದೇ ಸಂಜೆ,
ಅಮ್ಮ ಇದ್ದಳು ಉಯ್ಯಾಲೆಯಲ್ಲಿ,
ಕಣ್ತುಂಬಿಕೊಳ್ಳುತ್ತಾ,
ಅತ್ತಿಂದಿತ್ತ ಓಡಾಡುತ್ತಿದ್ದ  ಕಂದನ... 
ನಿಶೆ ಆಗಷ್ಟೇ ಸೂರ್ಯನಿಗೆ 
ವಿದಾಯ ಹೇಳಿ,
ಚಂದಿರನ ತೋಳ ತೆಕ್ಕೆಗೆ 
ಜಾರುತಿದ್ದಳು... 
ಇದ್ದಕ್ಕಿದ್ದಂತೆ ಯಾರನ್ನೋ ಹಿಡಿಯಲು 
ಓಡಿದಳು ಕಂದಮ್ಮ... 
ತಾಯಿ ಹಿಂದೆಯೇ ಹಿಂಬಾಲಿಸಿದಳು 
ಕಿರುಚುತ್ತಾ, 'ತಾಳಮ್ಮ ...... '
ಎತ್ತಿ ಸೊಂಟದಲ್ಲಿಟ್ಟು  ಕೇಳಲು 
ತಾಯಿ ಮುತ್ತನಿಡುತ್ತಾ ,
"ಗಾಳಿಯನ್ನೇಕೆ ಹಿಡಿಯುತಿದ್ದಿ 
ನನ್ನ ಪುಟಾಣಿ  ಚಿನ್ನ??",
ಪಿಳಿಪಿಳಿ ಕಣ್ಣಿನೊಂದಿಗೆ ,
ಬೊಟ್ಟು ತೋರಿಸಿ ಕಂದಮ್ಮ, 
ಹೇಳಿತು ತೊದಲು ನುಡಿಯುತ್ತಾ ,
"ಕಂಡಿಲ್ಲವೇ ಅಮ್ಮಾ , 
ಹಿಡಿಯಲು ಹೋಗಿದ್ದು 
ನಾನು ಆ ಬೀಳುತಿದ್ದ ಮಗುವನ್ನ ".........
ಬೊಟ್ಟು ಮಾಡಿದ ಕಡೆ 
ತಾಯಿ ನೋಡಲು ,
ಕಂಡದ್ದು ಕೇವಲ 
ನಿಶೆಯ ಕಗ್ಗತ್ತಲು...
"ನೋಡಮ್ಮ ಮಗು ಬಿದ್ದಿದೆ
ಎತ್ತಮ್ಮ, ಅಳುತ್ತಿದೆ",
ಎನಲು ಅವಳ ಮಗಳು,
ಅಲ್ಲೇ ಬೊಟ್ಟು ಮಾಡುತ್ತಾ...
ಸಣ್ಣದಾಗಿ ಕೇಳಿ ಬಂತು
ಒಂದು ಅಳು, 
ನಿಶೆಯ ನೀರವ ಮೌನವನ್ನು
ಭೇದಿಸುತ್ತಾ......
                                  ಶೀತಲ್....
(ಇದೊಂದು ಹಾರರ್ ಕವನ, ಸತ್ಯ ಘಟನೆ ಯೇ ಇದಕ್ಕೆ ಸ್ಫೂರ್ತಿ)

Sunday 21 March 2021

ಮೇಣದ ಬತ್ತಿ-ನೆರಳು ....


ಕತ್ತಲು  ಕವಿದಿತ್ತು,
ನೆತ್ತರ ಬಣ್ಣದ ಸೂರ್ಯನೂ
ಆಗಷ್ಟೇ ಮುಳುಗಿದ್ದ...
ತಂಗಾಳಿ ಬೀಸುತ್ತಿರಲು
ಆ ಸದ್ದಿಗೆ
ನೀರವತೆಯೂ ಮೌನ ಮುರಿದಿತ್ತು...
ದೀಪವಿಲ್ಲದ ಮನೆಯಲ್ಲಿ
ತಡಕಾಡಿದಳು ಅವಳು
ಮೇಣದ ಬತ್ತಿಗಾಗಿ...
ಒಂಟಿತನವಲ್ಲದೆ ಯಾರಿರಲಿಲ್ಲ ,
ಪಾಪ!! ಅವಳ ಜೊತೆಗಾಗಿ...
ಸಣ್ಣದೊಂದು ಸದ್ದೂ ಕೂಡ
ಗುಡುಗಿನಂತೆ ಕಿವಿಗೆ ರಾಚುತಿತ್ತು..
ಬತ್ತಿ ಹೊತ್ತಿಸಿ ಕೋಣೆಯ ಹೊರ
ನಡೆದಳವಳು...
ಹಿಂದೆ ಹಿಂಬಾಲಿಸುತ್ತಿದ್ದ,
ಒಂದು ನೆರಳ, ಆ ಬೆಳಕಿನಲ್ಲಿ
ಕಂಡಳವಳು ...
ಅವಳ ಎದೆಯ ಸದ್ದು ಏರಿ  
ಪ್ರತಿಧ್ವನಿಸಿತು ಹೆದರಿ  
ಓಡಿದ ದಾರಿ ತುಂಬಾ...
ಕೈಯಲ್ಲಿದ್ದ ಬತ್ತಿ ಬಿದ್ದು
ಕೆಳಗೆ , ಕತ್ತಲೆ ಆವರಿಸಿತು
ಮತ್ತೆ ಆ ಮನೆಯ ತುಂಬಾ....
ಅವಳ ಆಕ್ರಂದನದೊಂದಿಗೆ
ಕೇಳುತಿತ್ತು ಗಹಗಹಿಸುವ ನಗು
ಆ!! ಆ!!  ಮನೆ ಇದ್ದ ಗಲ್ಲಿಯ ತುಂಬಾ... 

(ಹೊಸ ಪ್ರಯತ್ನ... ಇದೊಂದು ಹಾರರ್ ಕವನ)

ಶೀತಲ್......

ಅವಳ್ಯಾರು?

ಪ್ರಿಯ ಓದುಗರೇ, ಸಮಯ, ಕನಸು, ವಾಸ್ತವ ಇವೆಲ್ಲದರ ನಡುವೆ ನಡೆಯುವ ಜೀವನ ಎಷ್ಟು ನಿಜ? ಎಷ್ಟು ಕಲ್ಪನೆ? ಕಥಾನಾಯಕಿಯ ಈ ಆಸಕ್ತಿದಾಯಕ ಬದುಕಲ್ಲಿ ನೀವೂ ಭಾಗಿಯಾ...